ಹಳ್ಳಿಗೆ ಬೇಕಾದುದು ಡಿಗ್ರಿ ಅಲ್ಲ — ಕೌಶಲ್ಯದ ಪಟ್ಟು..!-- ನರೇಂದ್ರ ರೈ ದೇರ್ಲ
ಹಳ್ಳಿಗೆ ಬೇಕಾದುದು ಡಿಗ್ರಿ ಅಲ್ಲ — ಕೌಶಲ್ಯದ ಪಟ್ಟು..!
-- ನರೇಂದ್ರ ರೈ ದೇರ್ಲ
ಇತ್ತೀಚೆಗೆ ನಮ್ಮ ಹಳ್ಳಿಗೆ ಬಂದ ಟಿವಿ ರಿಪೇರಿ ಹುಡುಗನೊಬ್ಬ ನನಗೆ ಒಂದು ದೊಡ್ಡ ಪಾಠ ಹೇಳಿಹೋಗಿದ್ದ. ಪಾಠ ಅಂದರೆ ಭಾಷಣವಲ್ಲ, ಉಪನ್ಯಾಸವಲ್ಲ. ಅವನ ಕೆಲಸ, ಓಡಾಟ, ಅವನ ದಿನಚರಿಯೇ ನನಗೆ ಗ್ರಾಮೀಣ ಉದ್ಯೋಗದ ಒಂದು ಲಾಭಕರ ಮುಖವನ್ನು ಪಾಠವಾಗಿ ಕಲಿಸಿತ್ತು.
ನಮ್ಮನೆಯ ಟಿವಿಯಲ್ಲಿ ಒಂದು ಸಣ್ಣ ತಾಂತ್ರಿಕ ದೋಷವಿತ್ತು.ಒಮ್ಮೆ ಫೋನ್ ಮಾಡಿದರೆ ನಮ್ಮ ಹಳ್ಳಿಯಲ್ಲಿ ಸುಲಭವಾಗಿ ಯಾರೊಬ್ಬರೂ ಬರೋದು ಕಷ್ಟ. ಐದಾರು ಬಾರಿ ಕರೆ ಮಾಡಿದ ಮೇಲಷ್ಟೇ 'ಬರುತ್ತೇನೆ ಸರ್' ಅನ್ನುವ ಉತ್ತರ. ಬಂದದ್ದು ರಾತ್ರಿ ಹತ್ತು ಗಂಟೆಗೆ. ಕೈಯಲ್ಲಿ ಒಂದು ಚೀಲ, ತಲೆಗೆ ಹೆಲ್ಮೆಟ್, ಹಳೆಯ ಬೈಕ್ ಮೇಲೆ ದಿನದ ಧೂಳು ಬೇರೆ. ಒಂದೇ ನಿಮಿಷದಲ್ಲಿ ಒಂದು ಸ್ಪೇರ್ ಬದಲಿಸಿ ಟಿವಿ ಓಡಿಸಿದ. ಐದು ನೂರು ರೂಪಾಯಿ ಎಂದ. ಕೊಟ್ಟೆ.
“ಇವತ್ತಿನ ಡ್ಯೂಟಿ ಮುಗಿತಾ?” ಅಂತ ಕೇಳಿದೆ.
ನಗುತ್ತಾ “ಇಲ್ಲ ಸರ್, ಇನ್ನೂ ಮೂರು ಮನೆಬಾಕಿ ಇದೆ " ಅಂದ. ನನ್ನದು ಆ ದಿನ ಹದಿಮೂರು ಮನೆ.
ದಿನಕ್ಕೆ ಹದಿನೈದು ಮನೆ ಎಂದರೆ ಕನಿಷ್ಠ ಐದು ಸಾವಿರ ರೂಪಾಯಿ. ಕೆಲವೊಮ್ಮೆ ಹತ್ತು ಸಾವಿರವೂ ಆಗುತ್ತದೆ. ನಾಲ್ಕು ಸಾವಿರಕ್ಕಿಂತ ಕಡಿಮೆ ಆಗಿದ್ದೇ ಇಲ್ಲವಂತೆ. ಕೇಳಿದೆ—ಓದಿದ್ದು ಎಷ್ಟು? “ಏಳನೇ ಕ್ಲಾಸ್” ಅಂದ. ತಿಂಗಳಿಗೆ ಒಂದು ಲಕ್ಷಕ್ಕಿಂತ ಕಡಿಮೆ ಆದಾಯವಿಲ್ಲ.!
ಅದೇ ಸಮಯಕ್ಕೆ ನಿಮಗೊಂದು ಪೇಟೆಯ ಕಥೆ ಹೇಳುತ್ತೇನೆ ಕೇಳಿ. ಮಂಗಳೂರಿನ ಒಂದು ವಾಣಿಜ್ಯ ಸಂಸ್ಥೆಯಲ್ಲಿ ಸಾಮಾನ್ಯ ಕ್ಲರ್ಕ್ ಹುದ್ದೆಗೆ ಐದು ಸಾವಿರ ಅರ್ಜಿಗಳು!. ಅದರಲ್ಲಿ ಒಂದೂವರೆ ಸಾವಿರ ಮಂದಿ ಪೋಸ್ಟ್ಗ್ರಾಜುಯೇಟ್ಗಳು!. ವೇತನ ಇಪ್ಪತ್ತೆರಡು ಸಾವಿರ. ಅದಕ್ಕೂ ಶಿಫಾರಸ್ಸು, ಮಂತ್ರಿ ಸಂಸದ ಸ್ಪೀಕರ್ ಗಳಿಂದ ಫೋನ್ ಮಾಡಿಸಿದವರೂ ಇದ್ದರು.
ಮೇಲಿನ ಈ ಎರಡು ಚಿತ್ರಗಳನ್ನು ಒಟ್ಟಿಗೆ ಇಟ್ಟಾಗ ಸಹಜವಾಗಿಯೇ ಒಂದು ಪ್ರಶ್ನೆ ಎದುರಾಗುತ್ತದೆ. ನಮಗೀಗ ಶತಮಾನದಿಂದ ನಡೆದು ಬಂದ ಸಾಂಪ್ರದಾಯಿಕ ಬಿಎ, ಬಿಕಾಂ ನಂತಹ ಪದವಿಗಳು ಬೇಕಾ? ಉದ್ಯೋಗ ಸೃಷ್ಟಿಸಿ, ಅನ್ನದಾರಿಯನ್ನು ಕಂಡುಕೊಳ್ಳುವ ತರಬೇತಿ- ಕಲಿಕಾ ಕೇಂದ್ರಗಳು ಬೇಕಾ?
ಇವತ್ತಿನ ಹಳ್ಳಿಗಳಲ್ಲಿ ಕೆಲಸ ಇಲ್ಲ ಅನ್ನೋ ಮಾತು ಅಪ್ಪಟ ಸುಳ್ಳು. ಕೆಲಸಗಾರರಿಲ್ಲ ಅನ್ನೋದೇ ನಿಜ. ತೆಂಗಿನ ಮರ ಏರುವವರು ಸಿಗೋದಿಲ್ಲ. ಅಡಿಕೆ ತೆಗೆಯುವವ, ಬೋರ್ಡೂ ಸ್ಪ್ರೇ ಮಾಡುವವರು, ಮರದ ಕೆಲಸದವರು, ಸಾರಣೆ ಕೆಲಸದವರು,ರಬ್ಬರ್ ಟ್ಯಾಪಿಂಗ್ ಮಾಡೋಕೆ,—ಎಲ್ಲಾ ಕಡೆ ಒಂದೇ ಕೊರತೆ.
ಇದಕ್ಕೆ ಕಾರಣ ಶಿಕ್ಷಣವಲ್ಲ. ಕೌಶಲ್ಯದ ಶಿಕ್ಷಣದ ಕೊರತೆ.
ನಮ್ಮ ಶಿಕ್ಷಣ ವ್ಯವಸ್ಥೆ ಕೈಗೆ ಕೆಲಸ ಕೊಡುವುದನ್ನು ಬಿಟ್ಟು, ಬರೀ ಕಾಗದದಲ್ಲಿ ಪ್ರಮಾಣಪತ್ರ ಕೊಡುವುದರಲ್ಲಿ ತೃಪ್ತಿಯಾಗಿದೆ. ಹಳ್ಳಿಗೆ ಬೇಕಾಗಿರುವುದು ಡಿಗ್ರಿ ಅಲ್ಲ; ತರಬೇತಿ. ಪದವಿ ಅಲ್ಲ; ಪಟ್ಟು. ಜೀವನ ಕೌಶಲ್ಯದ ನಿಜವಾದ ಪಟ್ಟು!. ಟಿವಿ ರಿಪೇರಿ, ಎಲೆಕ್ಟ್ರಿಕಲ್ ಕೆಲಸ, ಪ್ಲಂಬಿಂಗ್, ಕೃಷಿ ಸಹಾಯಕ ಕೆಲಸಗಳು, ಯಂತ್ರೋಪಕರಣಗಳ ನಿರ್ವಹಣೆ—ಇವೆಲ್ಲ ಹಳ್ಳಿಯಲ್ಲೇ ಕಲಿಸಬಹುದಾದ ವಿದ್ಯೆಗಳು. ಇವುಗಳೇ ನಾಳೆಯ ಭದ್ರ ಉದ್ಯೋಗಗಳು.
ಹಳ್ಳಿಯಲ್ಲಿ ಹುಟ್ಟಿದ ಕೈಗಳಿಗೆ, ಹಳ್ಳಿಯಲ್ಲೇ ಕೆಲಸ ಸಿಕ್ಕ ದಿನ, ಉದ್ಯೋಗಕ್ಕಾಗಿ ಊರು ಬಿಟ್ಟು ಓಡೋ ಪರಿಸ್ಥಿತಿ ಕಡಿಮೆಯಾಗುತ್ತದೆ. ಆಗ ಶಿಕ್ಷಣ ಬದುಕಿನ ಅಲಂಕಾರವಾಗುತ್ತದೆ; ಕೌಶಲ್ಯ ಬದುಕಿನ ಆಧಾರವಾಗುತ್ತದೆ.
ಇದೇ ಪ್ರಶ್ನೆ ಕೃಷಿಯಲ್ಲೂ ಎದುರಾಗುತ್ತದೆ. ನಮ್ಮಲ್ಲಿ ಬಹುಕಾಲದಿಂದ ಒಂದು ತಪ್ಪು ಕಲ್ಪನೆ ಗಟ್ಟಿಯಾಗಿ ನೆಲೆಸಿದೆ. ಕೃಷಿ ಎಂದರೆ ಉತ್ಪಾದನೆ ಮಾತ್ರ; ಬೆಳೆ ನೆಲೆಯಲ್ಲಿ ಏನೇ ಸಮಸ್ಯೆ ಬಂದರೂ ಅದಕ್ಕೆ ಮೇಲಿಂದ ಸಲಹೆ ಬರಬೇಕು. ಆದರೆ ಹಳ್ಳಿ ಕೇಂದ್ರಿತ ಕೃಷಿಯ ಅಸಲಿ ಸಂಕಟ ಉತ್ಪಾದನೆಯಲ್ಲಿ ಇಲ್ಲ—ಜ್ಞಾನ ಮತ್ತು ಮಾರ್ಗದರ್ಶನದ ಕೊರತೆಯಲ್ಲಿದೆ.
ಇವತ್ತು ಅಡಿಕೆ ಬೆಳೆಸುವ ರೈತನು ರೋಗ ಬಂದಾಗ ಕೃಷಿ ಅಧಿಕಾರಿಯಲ್ಲ, ಕೀಟನಾಶಕ ಮಾರುವ ಪಕ್ಕದ ಅಂಗಡಿಯವನ ಮಾತು ಕೇಳುತ್ತಾನೆ. ಕಾಫಿ ಕಾಯಿ ಉದುರಿದರೆ, ಮೆಣಸಿನ ಬಳ್ಳಿ ಒಣಗಿದರೆ, ಭತ್ತಕ್ಕೆ ಬೇರು ಕೀಟ ಬಿದ್ದರೆ—ಇವುಗಳೆಲ್ಲ ಈಗ ಅನುಭವದ ವಿಷಯವಾಗಿಲ್ಲ; ಅವಸರದ ವಿಷಯವಾಗಿದೆ. ರೈತನ ಬಳಿ ಸಮಯವಿಲ್ಲ. ಸರಿಯಾದ ಸಲಹೆ ಸಮಯಕ್ಕೆ ಸಿಗುವುದಿಲ್ಲ. ಹೀಗಾಗಿ ತಪ್ಪು ಔಷಧ, ತಪ್ಪು ಪ್ರಮಾಣ, ತಪ್ಪು ವೆಚ್ಚ—ಅಂತಿಮವಾಗಿ ತುಂಬಲಾರದ ನಷ್ಟವೇ.
ಇಂಥ ಸಂದರ್ಭದಲ್ಲಿ ಹಳ್ಳಿಗಳಿಗೆ ಬೇಕಾಗಿರುವುದು ಮತ್ತೊಂದು ಸರಕಾರಿ ಕಚೇರಿ ಅಲ್ಲ; ಕೃಷಿ ಕ್ಲಿನಿಕ್ಗಳು. ಹಾಗಂತ ಅವು ಫೈಲು ಹಿಡಿದು ಕುಳಿತಿರುವ ಜಾಗಗಳಾಗಬಾರದು. ಹೊಲಕ್ಕೆ ಇಳಿಯುವವರು ಬೇಕು. ಬೆಳೆ ನೋಡಿ ರೋಗ ಗುರುತಿಸುವವರು ಬೇಕು. ಮಣ್ಣು, ಹವಾಮಾನ, ನೀರು—ಇವುಗಳ ಭಾಷೆ ಅರಿತವರು ಬೇಕು. ಅಂಥವರು ಪುಸ್ತಕದಿಂದ ಮಾತ್ರ ಹುಟ್ಟುವುದಿಲ್ಲ; ತರಬೇತಿಯಿಂದ ಹುಟ್ಟುತ್ತಾರೆ.
ಅದಕ್ಕೇ ಹಳ್ಳಿ ಕೇಂದ್ರಿತ ಕೌಶಲ್ಯಾಧಾರಿತ ತರಬೇತಿ ಕೇಂದ್ರಗಳು ಇವತ್ತಿನ ತುಂಬಾ ಅಗತ್ಯ.ಅವು ಒಂದೆರಡು ದಿನದ ಕಾರ್ಯಾಗಾರಗಳಲ್ಲ; ನಿರಂತರ ಕಲಿಕೆಯ ಜಾಗಗಳು. ಅಲ್ಲಿ ಅಡಿಕೆ, ಕಾಫಿ, ಮೆಣಸು, ಭತ್ತಕ್ಕೆ ಪ್ರತ್ಯೇಕ ಮಾದರಿ ಹೊಲ ಇರಬೇಕು. ರೋಗ, ಪರಿಹಾರ, ವೆಚ್ಚ, ಲಾಭ—ಎಲ್ಲವೂ ಕಣ್ಣಿಗೆ ಕಾಣುವಂತೆ ಇರಬೇಕು.
ಇದರ ಜೊತೆಗೆ ಪಶುಸಂಗೋಪನೆ. ಕೋಳಿ, ಕುರಿ–ಆಡು, ಜೇನು—ಇವು ಪೂರಕ ಆದಾಯ ಅನ್ನೋದನ್ನು ಮೀರಬೇಕು. ಸರಿಯಾದ ತರಬೇತಿ ದೊರೆತರೆ ಇವೇ ಹಳ್ಳಿಯ ಮುಖ್ಯ ಆದಾಯವಾಗಬಲ್ಲವು. ಆಹಾರ, ಆರೋಗ್ಯ, ಮಾರುಕಟ್ಟೆ—ಈ ಮೂರು ಗೊತ್ತಿದ್ದರೆ ರೈತನ ಕೈಯಲ್ಲಿ ನಗದು ಹರಿಯುತ್ತದೆ.
ಅದಕ್ಕಿಂತ ಮುಂದಿನ ಹಂತ ಆಹಾರ ಸಂಸ್ಕರಣೆ. ಭತ್ತ ಬೆಳೆದು ಅಕ್ಕಿ ಮಾರುವುದರಲ್ಲೇ ಕಥೆ ಮುಗಿಯಬಾರದು. ಮೌಲ್ಯವರ್ಧನೆ, ಪ್ಯಾಕೇಜಿಂಗ್, ಸ್ಥಳೀಯ ಮಾರುಕಟ್ಟೆ—ಇವು ತರಬೇತಿಯ ಭಾಗವಾಗಬೇಕು. ರೈತ ಉತ್ಪಾದಕನಾಗಿಯೇ ನಿಲ್ಲದೆ, ಪ್ರಕ್ರಿಯೆಯ ಒಂದು ಹಂತ ಮೇಲಕ್ಕೆ ಏರಬೇಕು.
ಇವೆಲ್ಲ ಬರೀ ಹೊಸ ಆಲೋಚನೆಗಳಲ್ಲ. ಇಸ್ರೇಲ್, ನೆದರ್ಲ್ಯಾಂಡ್ಸ್, ಜಪಾನ್ ಜನ ಕೃಷಿಯನ್ನು ಹಳ್ಳಿಯಿಂದ ಹೊರಗೆ ಬಿಡಲಿಲ್ಲ. ಜ್ಞಾನವನ್ನು ನಗರಕ್ಕೆ ಸಾಗಲು ಬಿಡಲಿಲ್ಲ. ಅಥವಾ ಪರಿಹಾರ ಹೇಳಲು ಗ್ರಾಮಗಳಿಗೆ ಪೇಟಿಯ ಮಂದಿ ಬರಬೇಕೆಂದು ಬಯಸಲಿಲ್ಲ. ನಮಗೂ ಅದೇ ಬೇಕು. ಹಳ್ಳಿ ಕೇಂದ್ರಿತ ತರಬೇತಿ ಕೇಂದ್ರಗಳು. ಅಲ್ಲಿ ಕಲಿಕೆ, ಪ್ರಯೋಗ, ತಪ್ಪು, ತಿದ್ದುಪಡಿ—ಎಲ್ಲವೂ ನಡೆಯಬೇಕು. ಅಲ್ಲಿಂದ ಹೊರಬರುವವರು ಉದ್ಯೋಗ ಕೇಳುವವರಾಗಬಾರದು; ಉದ್ಯೋಗ ಸೃಷ್ಟಿಸುವವರಾಗಬೇಕು.
ನಾವು ದಿನವೂ ಹಳ್ಳಿ ಖಾಲಿಯಾಗುತ್ತಿದೆ ಎಂದು ಅಳುತ್ತೇವೆ. ಆದರೆ ಹಳ್ಳಿಗೆ ಜ್ಞಾನ, ಗೌರವ ಮತ್ತು ಆದಾಯ—ಈ ಮೂರನ್ನು ಮರಳಿಸಿದರೆ ಯಾರೂ ನಗರಕ್ಕೆ ಓಡುವುದಿಲ್ಲ. ಹಳ್ಳಿ ಇನ್ನೂ ಸಾಧ್ಯತೆಯಿಂದ ತುಂಬಿದೆ. ಅದನ್ನು ತೆರೆಯುವ ಕೀಲಿ ಮಾತ್ರ ನಾವು ಇನ್ನೂ ಸರಿಯಾಗಿ ತಯಾರಿಸಿಲ್ಲ.
ಇದು ಕೇವಲ ಕೃಷಿಯ ಪ್ರಶ್ನೆಯಲ್ಲ. ಇದು ಹಳ್ಳಿಯ ಭವಿಷ್ಯದ ಪ್ರಶ್ನೆ. ಬೆಳಿಗ್ಗೆ ಈ ದೇಶದ ಯಾವುದೇ ಹಳ್ಳಿಯ ಬಸ್ ನಿಲ್ದಾಣಕ್ಕೆ ಹೋದರೆ ಅಭಿವೃದ್ಧಿಯ ನಕ್ಷೆ ಸ್ಪಷ್ಟವಾಗಿ ಕಾಣುತ್ತದೆ. ಹಳದಿ ಬಸ್ಸುಗಳಲ್ಲಿ ಬ್ಯಾಗ್ಗಿಂತ ದೊಡ್ಡ ಕನಸು ಹೊತ್ತು ಮಕ್ಕಳಿದ್ದಾರೆ.ಕೆಂಪು ಬಸ್ಸುಗಳಲ್ಲಿ ಪೋಷಕರು—ಮಣ್ಣಿನಿಂದ ದೂರ ಸರಿದು ಸಂಬಳದ ಕಡೆಗೆ ನಗರದ ರಂಗಿನ ಓಡುವವರು. ಹಳ್ಳಿ ಹೀಗೇ ದಿನದ ಆರಂಭದಲ್ಲೇ ತನ್ನ ಜೀವಶಕ್ತಿಯನ್ನು ನಗರಕ್ಕೆ ಒಪ್ಪಿಸುತ್ತಿರುತ್ತದೆ. ಸಂಜೆ ಮತ್ತೆ ಅದೇ ಬಸ್ಸುಗಳು ಹಳ್ಳಿಗೆ ಬರುತ್ತವೆ; ಆದರೆ ಆಗ ಹಳ್ಳಿಗೆ ಮರಳುವುದು ದಣಿವು, ಅಸಹನೆ, ಸಮಯದ ಕೊರತೆ. ಆತ್ಮ ಮರಳುವುದಿಲ್ಲ.
ನಮ್ಮ ದೇಶದ ಬಹಳ ದೊಡ್ಡ ದೋಷ ಇದೇ—ಉದ್ಯೋಗ ಅಂದರೆ ನಗರ, ಉದ್ಯೋಗ ಸೃಷ್ಟಿ ಅಂದರೆ ಮಹಾನಗರ ಎನ್ನುವ ತಪ್ಪು ನಂಬಿಕೆ. ಸರಕಾರದ ಯೋಜನೆಗಳ ನಕ್ಷೆಯಲ್ಲೂ ಅದೇ ರೇಖೆಗಳು. ಕೈಗಾರಿಕೆ, ಸೇವೆ, ತರಬೇತಿ—ಎಲ್ಲವೂ ನಗರಗಳ ಸುತ್ತಲೂ ಗುಂಪಾಗಿವೆ. ಆದರೆ ಈ ದೇಶದ ಆತ್ಮ ಇನ್ನೂ ಹಳ್ಳಿಯಲ್ಲೇ ಉಸಿರಾಡುತ್ತಿದೆ. ಮಣ್ಣು, ನೀರು, ಬೆಳೆ, ತೋಟ—ಇವೆಲ್ಲಾ ನಗರದಲ್ಲಿ ಸಿಗುವುದಿಲ್ಲ.
ವಿಚಿತ್ರವೆಂದರೆ ನಗರದಲ್ಲಿ ವೈದ್ಯರು, ಇಂಜಿನಿಯರ್ಗಳು ಬೇಕಾದಷ್ಟು ಸಿಗುತ್ತಾರೆ. ಆದರೆ ಹಳ್ಳಿಯಲ್ಲಿ ಒಬ್ಬ ಅಡಿಕೆ ತೆಗೆಯುವವ, ತೆಂಗು ಏರುವವ, ಸರಿಯಾಗಿ ವಯರಿಂಗ್ ಮಾಡುವವ, ಒಬ್ಬ ಎಲೆಕ್ಟ್ರಿಷಿಯನ್, ಸಮಯಕ್ಕೆ ಬರುವ ಒಬ್ಬ ಗಾರೆ ಕೆಲಸದವ—ಇವರು ದುರ್ಲಭ. ಹೇಳಿದ ದಿನ, ಹೇಳಿದ ಸಮಯಕ್ಕೆ ಕೆಲಸಕ್ಕೆ ಬರುವುದು ಈಗ ಹಳ್ಳಿಯಲ್ಲಿ ಅಪರೂಪದ ಶಿಸ್ತು. ಇದೊಂದು ಕೌಶಲ್ಯದ ಕೊರತೆ ಮಾತ್ರವಲ್ಲ; ಗೌರವದ ಕೊರತೆಯೂ ಅಹುದು.
ಗ್ರಾಮೀಣ ಕೃಷಿ ವಲಯದಲ್ಲಿ ಉದ್ಯೋಗಕ್ಕೆ ಅಪಾರ ಅವಕಾಶಗಳಿವೆ. ಆದರೆ ಆ ಅವಕಾಶಗಳಿಗೆ ದಾರಿ ತೋರಿಸುವ ಕೈ ಹಿಡಿಯುವ ವ್ಯವಸ್ಥೆಗಳು ಇಲ್ಲ. ತರಬೇತಿ ಕೇಂದ್ರಗಳು ನಗರದಲ್ಲಿವೆ; ಹಳ್ಳಿಯಲ್ಲಿ ಕೈ ಕೆಲಸ ಕಲಿಯಬೇಕಾದವರು ಬಸ್ ಹತ್ತಿ ದೂರ ಹೋಗಬೇಕಾಗಿದೆ. ಫಲಿತಾಂಶ—ಹಳ್ಳಿ ಖಾಲಿ, ನಗರ ಮಿತಿಮೀರಿ ತುಂಬಿ ತುಳುಕುತಿದೆ .
ಇದೇ ಸಂದರ್ಭದಲ್ಲಿ ನಮ್ಮ ಕಣ್ಣು ಸರಕಾರಿ ಶಾಲೆಗಳ ಮೇಲೆ ಬೀಳಬೇಕು. ವಿದ್ಯಾರ್ಥಿಗಳಿಲ್ಲದೆ, ಉತ್ಸಾಹವಿಲ್ಲದೆ, ಬಾಗಿಲು ಮುಚ್ಚುವ ಹಂತದಲ್ಲಿರುವ ಈ ಶಾಲೆಗಳು ನಮ್ಮ ಮುಂದಿರುವ ದೊಡ್ಡ ಸಂಪತ್ತು ಆಗಬೇಕು. ಇದೇ ಶಾಲೆಗಳನ್ನು ಖಾಸಗಿ ಸಹಭಾಗಿತ್ವದಲ್ಲಿ, ಧರ್ಮಸ್ಥಳದಂತಹ ರುಢಶೆಡ್ ಮಾದರಿಯಲ್ಲಿ, ತಿಂಗಳ ಅಥವಾ ವರ್ಷದ ತರಬೇತಿ ಕೇಂದ್ರಗಳಾಗಿ ಪರಿವರ್ತಿಸಬಹುದಾಗಿದೆ. ಅಲ್ಲಿ ಪಾಠಶಾಲೆಯ ಶಿಸ್ತು, ಹಳ್ಳಿಯ ನೆಲಸಂಪರ್ಕ, ಕೈಕೆಲಸದ ಗೌರವ—ಮೂರು ಒಂದೇ ಕಡೆ ಸೇರುವ ಅವಕಾಶ ಇದೆ.
ಅಡಿಕೆ, ತೆಂಗು, ತೋಟಗಾರಿಕೆ, ವಿದ್ಯುತ್, ಪ್ಲಂಬಿಂಗ್, ಗಾರೆ ಕೆಲಸ—ಇವುಗಳೆಲ್ಲಾ ‘ಕಡಿಮೆ ಕೆಲಸ’ಗಳಲ್ಲ. ಇವು ಹಳ್ಳಿಯ ಬದುಕನ್ನು ಸಾಗಿಸುವ ಜೀವನಾಡಿಗಳು. ಈ ಕೌಶಲ್ಯಗಳಿಗೆ ಪ್ರಮಾಣಪತ್ರ, ಗೌರವ, ನಿರಂತರ ತರಬೇತಿ ಸಿಕ್ಕರೆ ಹಳ್ಳಿಯಲ್ಲೇ ಉದ್ಯೋಗ ಸೃಷ್ಟಿಯಾಗುತ್ತದೆ. ಮಕ್ಕಳು ಹಳದಿ ಬಸ್ಸು ಹತ್ತಿ ದೂರ ಹೋಗಬೇಕಾಗಿಲ್ಲ. ಪೋಷಕರು ಕೆಂಪು ಬಸ್ಸಿನಲ್ಲಿ ದಿನದ ಬದುಕು ಖರ್ಚು ಮಾಡಬೇಕಾಗಿಲ್ಲ.
ಉದ್ಯೋಗ ಹಳ್ಳಿಯಲ್ಲಿ ಹುಟ್ಟಿದ ದಿನ ವಲಸೆ ನಿಲ್ಲುತ್ತದೆ. ಶಾಲೆ ಮತ್ತೆ ಜೀವಂತ ಕೇಂದ್ರವಾಗುತ್ತದೆ. ಹಳ್ಳಿ ಮತ್ತೆ ಉಸಿರಾಡುತ್ತದೆ. ನಗರಕ್ಕೂ ಅದೇ ಒಳ್ಳೆಯದು—ಅತಿಭಾರ ಕಡಿಮೆಯಾಗುತ್ತದೆ.
ಅಭಿವೃದ್ಧಿ ಅಂದರೆ ಎಲ್ಲರೂ ನಗರಕ್ಕೆ ಹೋಗುವುದು ಅಲ್ಲ. ಅಭಿವೃದ್ಧಿ ಅಂದರೆ ಹಳ್ಳಿಯಲ್ಲಿ ಉಳಿಯುವ ಧೈರ್ಯ ಸಿಗುವುದು. ಆ ಧೈರ್ಯ ತರಬೇತಿಯಿಂದ ಬರುತ್ತದೆ, ಗೌರವದಿಂದ ಬರುತ್ತದೆ, ಸ್ಥಳೀಯ ಅವಕಾಶಗಳಿಂದ ಬರುತ್ತದೆ. ಇನ್ನೂ ತಡವಾಗಿಲ್ಲ. ಹಳ್ಳಿಯ ಬಾಗಿಲಲ್ಲಿ ನಿಂತು ನೋಡುತ್ತಾ ಇರುವ ಬದಲು, ಒಳಗೆ ನುಗ್ಗಿ ಕೆಲಸ ಶುರು ಮಾಡಿದರೆ ಉತ್ತಮ.
Comments
Post a Comment